ಬಾಗಿನ ಕೊಟ್ಟು ಬರುತ್ತಿದ್ದ ವೇಳೆ ಭೀಕರ ಅಪಘಾತ, ತಂದೆ-ಮಗಳು ಸಾವು | ಜನತಾ ನ್ಯೂಸ್
ಚಿಕ್ಕಮಗಳೂರು : ಹಿರಿಮಗಳಿಗೆ ಬಾಗಿನ ಕೊಟ್ಟು ವಾಪಸ್ ಸ್ವಗ್ರಾಮಕ್ಕೆ ತೆರಳುತ್ತಿದ್ದ ತಂದೆ ಮತ್ತು ಕಿರಿಮಗಳಿಬ್ಬರು ಮಾರ್ಗಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅಪ್ಪ-ಮಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿಯಲ್ಲಿ ನಡೆದಿದೆ.
ಮುಗುಳವಳ್ಳಿ ಮೂಲದ ಜಯಣ್ಣ(58) ಮತ್ತು ರಕ್ಷಿತಾ (19) ಮೃತ ದುರ್ದೈವಿಗಳು. ಗೌರಿಹಬ್ಬದ ಪ್ರಯುಕ್ತ ಜಯಣ್ಣ ಅವರು ತನ್ನ ಕಿರಿಮಗಳ ಜತೆ ಪಿಳ್ಳೇನಹಳ್ಳಿಯಲ್ಲಿದ್ದ ಹಿರಿಮಗಳಿಗೆ ಬಾಗಿನ ಕೊಡಲು ಹೋಗಿದ್ದರು. ಮಗಳಿಗೆ ಬಾಗಿನ ಕೊಟ್ಟು ಇಬ್ಬರೂ ಪಿಳ್ಳೇನಹಳ್ಳಿಯಿಂದ ಮುಗುಳವಳ್ಳಿಗೆ ದ್ವಿಚಕ್ರ ವಾಹನದಲ್ಲಿ ವಾಪಸ್ ಆಗುತ್ತಿದ್ದರು.
ಉದ್ದೇಬೋರನಹಳ್ಳಿ ಗ್ರಾಮದ ತಿರುವಿನಲ್ಲಿ ಎದುರಿನಿಂದ ವೇಗವಾಗಿ ಬಂದ ಗ್ಯಾಸ್ ಸಿಲಿಂಡರ್ ಸಾಗಣೆ ಲಾರಿ ಬೈಕ್ಗೆ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ಅಪ್ಪ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ಗೆ ಢಿಕ್ಕಿ ಹೊಡೆದ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದ್ದು, ಲಾರಿ ಚಾಲಕ ಹಾಗೂ ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಸಖರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.